ಅಷ್ಟಾವಕ್ರಗೀತೆ ಅದ್ವೈತ ಸಿದ್ಧಾಂತದ ಪ್ರಮುಖ ಗ್ರಂಥವಾಗಿದೆ. ಇದನ್ನು ಅಷ್ಟಾವಕ್ರಮುನಿಯು ಮಿಥಿಲೆಯ ರಾಜನಾದ ಜನಕನಿಗೆ ಉಪದೇಶ ಮಾಡಿದನು.
ಬಹುಶಃ ಇದರ ರಚನೆ ಭಗವದ್ಗೀತೆಯ ನಂತರ ಅಂದರೆ ಕ್ರಿ. ಪೂ. ೪೦೦-೩೦೦ ರಲ್ಲಿ ಆಗಿರಬಹುದು.
ಅಷ್ಟಾವಕ್ರ ಋಷಿ ಯಾರೆಂಬುದರ ಬಗ್ಗೆ ಹೀಗೊಂದು ಕತೆ ಇದೆ.
ಅರುಣಿ ಋಷಿಗೆ ಸುಜಾತಾ ಎಂಬ ಮಗಳಿದ್ದಳು. ಅವಳು ಕಹೋಡ ಎಂಬವನನ್ನು ಮದುವೆಯಾದಳು. ಗಂಡ-ಹೆಂಡತಿಯರಿಬ್ಬರೂ ಸದಾ ವೇದಶಾಸ್ತ್ರಗಳ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು.
ಆದರೆ ಹೊಟ್ಟೆಪಾಡು ಬೇಕಲ್ಲ. ಕಹೋಡ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತಿರುತ್ತಿದ್ದ.
ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಅವಳ ಹೊಟ್ಟೆಯಲ್ಲಿರುವ ಮಗುವೂ ಕೇಳುತ್ತಿತ್ತು.
ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಈ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ."
ಇದನ್ನು ಕೇಳಿದ ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟಿರದ ತನ್ನ ಸ್ವಂತ ಮಗುವಿಗೇ "ನೀನು ಅಷ್ಟಾವಕ್ರನಾಗಿ ಜನಿಸು" ಎಂದು ಶಾಪ ಕೊಟ್ಟುಬಿಟ್ಟ.
ತಂದೆಯಿಂದ ಬಂದ ಶಾಪವಲ್ಲವೇ! ಅದು ಸಫಲವಾಯಿತು: ಮಗುವು ವಿರೂಪಗೊಂಡು, ದೇಹದಲ್ಲಿ ಎಂಟು ವಕ್ರಗಳೊಂದಿಗೆ ಜನಿಸಿತು. ಮಗುವಿಗೆ ಅಷ್ಟಾವಕ್ರ ಎಂದು ಹೆಸರನ್ನೂ ಇಡಲಾಯಿತು.
ಬಾಲ್ಯದಲ್ಲಿ ಅವನನ್ನು ನೋಡಿದವರೆಲ್ಲರೂ ಅಪಹಾಸ್ಯದಿಂದ ನಗುತ್ತಿದ್ದರು. ಆದರೆ ಬಾಲಕ ಅಷ್ಟಾವಕ್ರನಿಗೆ ಅದರಿಂದ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಯಾಕೆಂದರೆ ಆ ವಯಸ್ಸಿಗೇ ಅವನು ಒಬ್ಬ ಪ್ರಬುದ್ಧ ಜ್ಞಾನಿಯಾಗಿದ್ದ.
ಜನಕ ರಾಜನು ಅಷ್ಟಾವಕ್ರನ ಶ್ರೇಷ್ಠ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಕೇಳಿದ. ಅವನಿಂದಲೇ ವಿದ್ಯೆ ಕಲಿಯಬೇಕೆಂದು ನಿರ್ಧರಿಸಿ, ಅವನ ಬಳಿಗೆ ಬಂದ. ಆದರೆ ಬಂದಿದ್ದು ಆಜ್ಞಾಪಿಸುವ ರಾಜನಾಗಿ ಅಲ್ಲ, ವಿನಮ್ರ ವಿದ್ಯಾರ್ಥಿಯಾಗಿ ಬಂದ.
ಸರ್ವಶಾಸ್ತ್ರ ಪಾರಂಗತನಾದರೂ ಅಷ್ಟಾವಕ್ರನು ವಿದ್ಯಾರ್ಥಿಗಳನ್ನು ಸ್ವೀಕರಿಸಲು ಉತ್ಸುಕತೆ ತೋರಿಸುತ್ತಿರಲಿಲ್ಲ, ಹಾಗಾಗಿ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದ. ಆದರೆ ಅವನು ರಾಜನನ್ನು ತಕ್ಷಣವೇ ತನ್ನ ಶಿಷ್ಯನಾಗಿ ಸ್ವೀಕರಿಸಿದ.
ಇದು ಇತರ ವಿದ್ಯಾರ್ಥಿಗಳಲ್ಲಿ ವೈಮನಸ್ಸಿಗೆ ಕಾರಣವಾಯಿತು. "ಆಹಾ, ಅಷ್ಟಾವಕ್ರನ ಪ್ರೀತಿಯ ಶಿಷ್ಯ ಜನಕ. ನಮಗೆಲ್ಲ ಕೊಟ್ಟಂತೆ ಯಾವುದೇ ಪರೀಕ್ಷೆಗಳನ್ನು ಕೊಡದೇ ಅವನು ರಾಜನನ್ನು ವಿದ್ಯಾರ್ಥಿಯಾಗಿ ಸ್ವೀಕರಿಸಿದ!" ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ಅಷ್ಟಾವಕ್ರನಿಗೆ ತಿಳಿದಿತ್ತು.
ಒಂದು ದಿನ ರಾಜ ತರಗತಿಗೆ ತಡವಾಗಿ ಬಂದ ಮತ್ತು ಆದ್ದರಿಂದ ಅಷ್ಟಾವಕ್ರನು ಪಾಠವನ್ನು ಆರಂಭಿಸದೇ ಅವನಿಗಾಗಿ ಕಾದ. ರಾಜ ಬಂದ ಕ್ಷಣ, ಅಷ್ಟಾವಕ್ರನು ಹೇಳಿದನು: "ಈ ದಿನ ನನಗೆ ಒಂದು ದಿವ್ಯ ದರ್ಶನವಾಗಿದೆ - ಅದೇನೆಂದರೆ ರಾಜಧಾನಿಯಲ್ಲಿ ಭಯಾನಕ ಬೆಂಕಿ ಮತ್ತು ಭೂಕಂಪಗಳು ಬಂದು ಇಡೀ ನಗರವೇ ಹೊತ್ತಿ ಉರಿಯುತ್ತದೆ - ಅಲ್ಲಿರುವ ಎಲ್ಲರೂ ಸಾಯುತ್ತಾರೆ. ಅದಕ್ಕಾಗಿ ನೀವೆಲ್ಲಾ ನಿಮ್ಮ ಪ್ರೀತಿಪಾತ್ರರನ್ನು ಅಥವಾ ಬೆಲೆಬಾಳುವ ವಸ್ತುಗಳನ್ನು ಉಳಿಸಲು ಬಯಸಿದರೆ ಈಗಲೇ ಧಾವಿಸಿ ಅವನ್ನು ರಕ್ಷಿಸಿಕೊಳ್ಳಿ!"
ಎಲ್ಲಾ ವಿದ್ಯಾರ್ಥಿಗಳೂ ಗಾಬರಿ-ಭಯಗಳಿಂದ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು.
ಅವರೆಲ್ಲಾ ಹೋದ ನಂತರ, ಅಷ್ಟಾವಕ್ರ ಮತ್ತು ರಾಜ ಮಾತ್ರ ಅಲ್ಲಿ ಉಳಿದರು. ಅಷ್ಟಾವಕ್ರ ಮೃದುವಾಗಿ ಕೇಳಿದ, ‘ಮಹಾರಾಜಾ, ನಿಮಗೆ ಬೇಕಾದದ್ದು, ಉಳಿಸಕೊಳ್ಳಬೇಕಾದದ್ದು ಏನೂ ಇಲ್ಲವೇ?’.
ಜನಕ ಹೇಳಿದ, “ನನ್ನ ಪ್ರಭು ಮತ್ತು ನನ್ನ ಸ್ನೇಹಿತನಾದ ನೀವು ಮಾತ್ರ ನನ್ನ ಏಕೈಕ ನಿಧಿ. ನಿಮ್ಮ ಹೊರತು ನನಗೆ ಅಮೂಲ್ಯವಾದದ್ದು ಇನ್ನೇನೂ ಇಲ್ಲ” . ಆಗ ತಲೆಯಾಡಿಸಿ ಮೃದುವಾಗಿ ಹೇಳಿದ, “ನಾನು ನಿಜವಾಗಿಯೂ ನಿಮ್ಮ ನಿಧಿಯೇ ಆಗಿದ್ದರೆ, ಈಗಿಂದೀಗಲೇ ನಿಮ್ಮ ಕುದುರೆಯನ್ನು ಏರಿ ಹೋಗಿ, ನನ್ನ ವಿದ್ಯಾರ್ಥಿಗಳ ಬಳಿಗೆ ಹೋಗಿ ರಾಜಧಾನಿ ಯಾವುದೇ ಅಪಾಯದಲ್ಲಿಲ್ಲ. ಗುರುಗಳು ತಪ್ಪಾಗಿ ಎಣಿಸಿದ್ದರು ಎಂದು ಹೇಳಿ ಅವರನ್ನು ಕರೆತನ್ನಿ ”.
ರಾಜನು ಇತರ ವಿದ್ಯಾರ್ಥಿಗಳನ್ನು ಹುಡುಕಲು ಹೊರಟ.
ಅವನು ಹಿಂತಿರುಗಿದ ನಂತರ, ಇತರ ವಿದ್ಯಾರ್ಥಿಗಳಲ್ಲಿ ಕೆಲವರು ಇಲ್ಲಿ ಮತ್ತು ಅಲ್ಲಿಗೆ ಅಲೆಸಿದ್ದಕ್ಕೆ ಗೊಣಗಿದರು. ಆದರೆ ಅವರಲ್ಲಿ ಕೆಲವರು ಮಾತ್ರ ಗುರುಗಳು ಜನಕನ ಶ್ರದ್ಧೆ, ಗುರುಭಕ್ತಿ ತಿಳಿದು, ಅವನನ್ನು ಗುರು ಪ್ರೀತಿಯ ವಿದ್ಯಾರ್ಥಿಯಾಗಿ ಏಕೆ ಆರಿಸಿಕೊಂಡರು ಎಂಬುದನ್ನು ಅರ್ಥಮಾಡಿಕೊಂಡರು.
ಆ ದಿನ ಎಲ್ಲರೂ ಕುಳಿತು ಅಮೃತದಂತಹ ಈ ಅಷ್ಟಾವಕ್ರ ಗೀತೆಯನ್ನು ಕೇಳಿದರು.
Comments
Post a Comment