Skip to main content

ಅಷ್ಟಾವಕ್ರ

ಅಷ್ಟಾವಕ್ರಗೀತೆ ಅದ್ವೈತ ಸಿದ್ಧಾಂತದ ಪ್ರಮುಖ ಗ್ರಂಥವಾಗಿದೆ. ಇದನ್ನು ಅಷ್ಟಾವಕ್ರಮುನಿಯು ಮಿಥಿಲೆಯ ರಾಜನಾದ ಜನಕನಿಗೆ ಉಪದೇಶ ಮಾಡಿದನು.  

ಬಹುಶಃ ಇದರ ರಚನೆ ಭಗವದ್ಗೀತೆಯ ನಂತರ ಅಂದರೆ ಕ್ರಿ. ಪೂ. ೪೦೦-೩೦೦ ರಲ್ಲಿ ಆಗಿರಬಹುದು.

ಅಷ್ಟಾವಕ್ರ ಋಷಿ ಯಾರೆಂಬುದರ ಬಗ್ಗೆ ಹೀಗೊಂದು ಕತೆ ಇದೆ.

ಅರುಣಿ ಋಷಿಗೆ ಸುಜಾತಾ ಎಂಬ ಮಗಳಿದ್ದಳು. ಅವಳು ಕಹೋಡ ಎಂಬವನನ್ನು ಮದುವೆಯಾದಳು. ಗಂಡ-ಹೆಂಡತಿಯರಿಬ್ಬರೂ ಸದಾ ವೇದಶಾಸ್ತ್ರಗಳ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು. 

ಆದರೆ ಹೊಟ್ಟೆಪಾಡು ಬೇಕಲ್ಲ. ಕಹೋಡ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತಿರುತ್ತಿದ್ದ. 

ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಅವಳ ಹೊಟ್ಟೆಯಲ್ಲಿರುವ ಮಗುವೂ ಕೇಳುತ್ತಿತ್ತು.

ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಈ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ." 

 ಇದನ್ನು ಕೇಳಿದ ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟಿರದ ತನ್ನ ಸ್ವಂತ ಮಗುವಿಗೇ "ನೀನು ಅಷ್ಟಾವಕ್ರನಾಗಿ ಜನಿಸು" ಎಂದು ಶಾಪ ಕೊಟ್ಟುಬಿಟ್ಟ. 

ತಂದೆಯಿಂದ ಬಂದ  ಶಾಪವಲ್ಲವೇ! ಅದು ಸಫಲವಾಯಿತು: ಮಗುವು ವಿರೂಪಗೊಂಡು,  ದೇಹದಲ್ಲಿ ಎಂಟು ವಕ್ರಗಳೊಂದಿಗೆ ಜನಿಸಿತು. ಮಗುವಿಗೆ ಅಷ್ಟಾವಕ್ರ ಎಂದು ಹೆಸರನ್ನೂ ಇಡಲಾಯಿತು. 

ಬಾಲ್ಯದಲ್ಲಿ ಅವನನ್ನು ನೋಡಿದವರೆಲ್ಲರೂ  ಅಪಹಾಸ್ಯದಿಂದ ನಗುತ್ತಿದ್ದರು. ಆದರೆ ಬಾಲಕ ಅಷ್ಟಾವಕ್ರನಿಗೆ ಅದರಿಂದ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಯಾಕೆಂದರೆ ಆ ವಯಸ್ಸಿಗೇ ಅವನು ಒಬ್ಬ ಪ್ರಬುದ್ಧ  ಜ್ಞಾನಿಯಾಗಿದ್ದ. 

ಜನಕ ರಾಜನು ಅಷ್ಟಾವಕ್ರನ ಶ್ರೇಷ್ಠ ಬುದ್ಧಿವಂತಿಕೆ ಹಾಗೂ ಅಪಾರ ಜ್ಞಾನದ ಬಗ್ಗೆ ಕೇಳಿದ. ಅವನಿಂದಲೇ ವಿದ್ಯೆ ಕಲಿಯಬೇಕೆಂದು ನಿರ್ಧರಿಸಿ,  ಅವನ ಬಳಿಗೆ ಬಂದ.  ಆದರೆ ಬಂದಿದ್ದು ಆಜ್ಞಾಪಿಸುವ ರಾಜನಾಗಿ ಅಲ್ಲ, ವಿನಮ್ರ ವಿದ್ಯಾರ್ಥಿಯಾಗಿ ಬಂದ. 

ಸರ್ವಶಾಸ್ತ್ರ ಪಾರಂಗತನಾದರೂ ಅಷ್ಟಾವಕ್ರನು ವಿದ್ಯಾರ್ಥಿಗಳನ್ನು ಸ್ವೀಕರಿಸಲು ಉತ್ಸುಕತೆ ತೋರಿಸುತ್ತಿರಲಿಲ್ಲ, ಹಾಗಾಗಿ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದ. ಆದರೆ ಅವನು ರಾಜನನ್ನು ತಕ್ಷಣವೇ ತನ್ನ ಶಿಷ್ಯನಾಗಿ ಸ್ವೀಕರಿಸಿದ. 

ಇದು ಇತರ ವಿದ್ಯಾರ್ಥಿಗಳಲ್ಲಿ ವೈಮನಸ್ಸಿಗೆ ಕಾರಣವಾಯಿತು. "ಆಹಾ, ಅಷ್ಟಾವಕ್ರನ ಪ್ರೀತಿಯ ಶಿಷ್ಯ ಜನಕ. ನಮಗೆಲ್ಲ ಕೊಟ್ಟಂತೆ ಯಾವುದೇ ಪರೀಕ್ಷೆಗಳನ್ನು ಕೊಡದೇ ಅವನು ರಾಜನನ್ನು ವಿದ್ಯಾರ್ಥಿಯಾಗಿ ಸ್ವೀಕರಿಸಿದ!"  ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ  ಅಷ್ಟಾವಕ್ರನಿಗೆ  ತಿಳಿದಿತ್ತು.

ಒಂದು ದಿನ ರಾಜ ತರಗತಿಗೆ ತಡವಾಗಿ ಬಂದ ಮತ್ತು ಆದ್ದರಿಂದ ಅಷ್ಟಾವಕ್ರನು ಪಾಠವನ್ನು ಆರಂಭಿಸದೇ  ಅವನಿಗಾಗಿ ಕಾದ. ರಾಜ ಬಂದ ಕ್ಷಣ, ಅಷ್ಟಾವಕ್ರನು ಹೇಳಿದನು: "ಈ ದಿನ ನನಗೆ ಒಂದು ದಿವ್ಯ ದರ್ಶನವಾಗಿದೆ - ಅದೇನೆಂದರೆ ರಾಜಧಾನಿಯಲ್ಲಿ ಭಯಾನಕ ಬೆಂಕಿ ಮತ್ತು ಭೂಕಂಪಗಳು ಬಂದು ಇಡೀ ನಗರವೇ ಹೊತ್ತಿ ಉರಿಯುತ್ತದೆ - ಅಲ್ಲಿರುವ ಎಲ್ಲರೂ ಸಾಯುತ್ತಾರೆ. ಅದಕ್ಕಾಗಿ ನೀವೆಲ್ಲಾ ನಿಮ್ಮ ಪ್ರೀತಿಪಾತ್ರರನ್ನು ಅಥವಾ ಬೆಲೆಬಾಳುವ ವಸ್ತುಗಳನ್ನು ಉಳಿಸಲು ಬಯಸಿದರೆ ಈಗಲೇ ಧಾವಿಸಿ ಅವನ್ನು ರಕ್ಷಿಸಿಕೊಳ್ಳಿ!"

ಎಲ್ಲಾ ವಿದ್ಯಾರ್ಥಿಗಳೂ ಗಾಬರಿ-ಭಯಗಳಿಂದ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. 

ಅವರೆಲ್ಲಾ ಹೋದ ನಂತರ, ಅಷ್ಟಾವಕ್ರ ಮತ್ತು ರಾಜ ಮಾತ್ರ ಅಲ್ಲಿ ಉಳಿದರು. ಅಷ್ಟಾವಕ್ರ ಮೃದುವಾಗಿ ಕೇಳಿದ, ‘ಮಹಾರಾಜಾ, ನಿಮಗೆ ಬೇಕಾದದ್ದು,  ಉಳಿಸಕೊಳ್ಳಬೇಕಾದದ್ದು ಏನೂ ಇಲ್ಲವೇ?’. 

ಜನಕ ಹೇಳಿದ, “ನನ್ನ ಪ್ರಭು ಮತ್ತು ನನ್ನ ಸ್ನೇಹಿತನಾದ ನೀವು ಮಾತ್ರ ನನ್ನ ಏಕೈಕ ನಿಧಿ. ನಿಮ್ಮ ಹೊರತು ನನಗೆ ಅಮೂಲ್ಯವಾದದ್ದು ಇನ್ನೇನೂ ಇಲ್ಲ” . ಆಗ ತಲೆಯಾಡಿಸಿ ಮೃದುವಾಗಿ ಹೇಳಿದ, “ನಾನು ನಿಜವಾಗಿಯೂ ನಿಮ್ಮ ನಿಧಿಯೇ ಆಗಿದ್ದರೆ, ಈಗಿಂದೀಗಲೇ ನಿಮ್ಮ ಕುದುರೆಯನ್ನು ಏರಿ ಹೋಗಿ, ನನ್ನ ವಿದ್ಯಾರ್ಥಿಗಳ ಬಳಿಗೆ ಹೋಗಿ ರಾಜಧಾನಿ ಯಾವುದೇ ಅಪಾಯದಲ್ಲಿಲ್ಲ. ಗುರುಗಳು ತಪ್ಪಾಗಿ ಎಣಿಸಿದ್ದರು ಎಂದು ಹೇಳಿ ಅವರನ್ನು ಕರೆತನ್ನಿ ”. 

 ರಾಜನು ಇತರ ವಿದ್ಯಾರ್ಥಿಗಳನ್ನು ಹುಡುಕಲು ಹೊರಟ.

ಅವನು ಹಿಂತಿರುಗಿದ ನಂತರ, ಇತರ ವಿದ್ಯಾರ್ಥಿಗಳಲ್ಲಿ ಕೆಲವರು ಇಲ್ಲಿ ಮತ್ತು ಅಲ್ಲಿಗೆ ಅಲೆಸಿದ್ದಕ್ಕೆ ಗೊಣಗಿದರು. ಆದರೆ ಅವರಲ್ಲಿ ಕೆಲವರು ಮಾತ್ರ ಗುರುಗಳು ಜನಕನ ಶ್ರದ್ಧೆ, ಗುರುಭಕ್ತಿ ತಿಳಿದು, ಅವನನ್ನು ಗುರು  ಪ್ರೀತಿಯ  ವಿದ್ಯಾರ್ಥಿಯಾಗಿ ಏಕೆ ಆರಿಸಿಕೊಂಡರು ಎಂಬುದನ್ನು ಅರ್ಥಮಾಡಿಕೊಂಡರು. 

ಆ ದಿನ ಎಲ್ಲರೂ ಕುಳಿತು ಅಮೃತದಂತಹ ಈ ಅಷ್ಟಾವಕ್ರ ಗೀತೆಯನ್ನು  ಕೇಳಿದರು.

ಜನಕನ ಕನಸು 

ಇನ್ನೊಂದು ಕತೆಯ ಪ್ರಕಾರ ಒಂದು ರಾತ್ರಿ ರಾಜಾ ಜನಕ ಒಂದು ದುಃಸ್ವಪ್ನ ಕಂಡನು. ಅದರಲ್ಲಿ ಶತ್ರು ಪಡೆ ಬಂದು ಭೀಕರ ಯುದ್ಧ ಮಾಡಿ ಜನಕನ್ನು ಸೋಲಿಸಿಬಿಟ್ಟಿತು. ಅವರ ರಾಜ ಜನಕನನ್ನು ಕೊಲ್ಲುವ ಬದಲು ಗಡಿಪಾರು ಮಾಡಿಬಿಟ್ಟರು.
 
ಜನಕನು ರಾಜ್ಯ, ಧನ-ಕನಕಗಳನ್ನೆಲ್ಲ ಕಳೆದುಕೊಂಡು ಭಿಕಾರಿಯಂತೆ ಅಲೆಯತೊಡಗಿದನು. ಯಾವುದೋ ದೇವಸ್ಥಾನದಲ್ಲಿ ಬಡ-ಬಗ್ಗರಿಗೆಂದು ಅನ್ನದಾನ ಮಾಡುತ್ತಿದ್ದಾರೆಂದು ಕೇಳಿ ಅಲ್ಲಿಗೆ ಬಂದು ಸಾಲಿನಲ್ಲಿ ನಿಂತನು. ಅವನ ದುರಾದೃಷ್ಟದಿಂದ ಅವನ ಪಾಳಿ ಬರುವ ತನಕ ಅನ್ನ-ಸಾರೆಲ್ಲವೂ ಖಾಲಿ ಆಗಿಬಿಟ್ಟತ್ತು. ಅವನು ಸ್ವಲ್ಪವಾದರೂ ಅನ್ನ ಕೊಡೆಂದು ಗೋಗರೆದಾಗ ಬಡಿಸಲು ನಿಂತವನಿಗೆ ಕರುಣೆ ಬಂದು ಪಾತ್ರೆಯ ತಳವನ್ನು ಕೆರೆಸಿ ಚೂರು ಅನ್ನವನ್ನು ಜನಕನ ಬಟ್ಟಲಿಗೆ ಹಾಕಿದ.
 
ಇನ್ನೇನು ಆ ಅನ್ನವನು ಜನಕ ತಿನ್ನಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ಒಂದು ಹಕ್ಕಿ ಹಾರಿ ಬಂದು ಅವನ ಬಟ್ಟಲನ್ನು ಬೀಳಿಸಿಬಿಟ್ಟಿತು.
 
ದುಃಖದಿಂದ ಕಣ್ಣೀರನ್ನು ಹೇಗೋ ತಡೆಯುತ್ತಿರುವಾಗ ಜನಕನಿಗೆ ಎಚ್ಚರವಾಯಿತು.
 
ಅವನಿಗೆ ತಾನು ರಾಜನಾಗಿ ಸಕಲೈಶ್ವರ್ಯದಿಂದ ಮೆರೆಯುತ್ತಿರುವದು ನಿಜವೋ, ಅಥವಾ ಭಿಕಾರಿಯಾಗಿ ತುತ್ತು ಅನ್ನಕ್ಕಾಗಿ ಒದ್ದಾಡಿದ್ದು ನಿಜವೋ ಎಂದು ತಿಳಿಯದಾಯಿತು.
 
ಅವನ ಸಂಕಟದ ಸುದ್ದಿ ತಿಳಿದು ಅಷ್ಟಾವಕ್ರ ಅವನ ಸಹಾಯಕ್ಕೆಂದು ಬಂದು ಅವನಿಗೆ ಬೋಧನೆಯನ್ನು ಮಾಡಿದ. 

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....