Skip to main content

ಅಷ್ಟಾವಕ್ರಗೀತಾ - ೩


ಆತ್ಮಜ್ಞಾನದ ಅವಲೋಕನ


ಅಷ್ಟಾವಕ್ರ ಉವಾಚ ..

ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ .
ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..

 ಶಬ್ದಾರ್ಥ:
ಅವಿನಾಶಿನಂ=ವಿನಾಶವಿಲ್ಲದವನನ್ನು;  ಆತ್ಮಾನಂ=ಆತ್ಮನನ್ನು;  ಏಕಂ=ಏಕೈಕನನ್ನು; ವಿಜ್ಞಾಯ=ತಿಳಿದು; ತತ್ತ್ವತಃ=ನಿಜ ಸ್ವರೂಪದಲ್ಲಿ; ತವ=ನಿನ್ನ;  ಆತ್ಮಜ್ಞಾನಸ್ಯ=ಆತ್ಮಜ್ಞಾನಿಯ;  ಧೀರಸ್ಯ=ಧೀರನ;  ಕಥಂ=ಹೇಗೆ;  ಅರ್ಥಾರ್ಜನೇ=ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ=ಮೋಹ

ಅನುವಾದ:

ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ?
ವಿವರಣೆ:

ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ. 

ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ .
ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2..

ಶಬ್ದಾರ್ಥ:

ಆತ್ಮ+ಅಜ್ಞಾನಾತ್=ಆತ್ಮದ ಅಜ್ಞಾನದಿಂದ; ಅಹೋ=ಅಹೋ; ಪ್ರೀತಿಃ=ಪ್ರೀತಿ;ವಿಷಯಭ್ರಮಗೋಚರೇ=ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ+ಅಜ್ಞಾನತಃ=ಚಿಪ್ಪಿನಲ್ಲಿ ಅಜ್ಞಾನದಿಂದ;  ಲೋಭಃ=ಲೋಭ; ಯಥಾ=ಹೇಗೆ; ರಜತವಿಭ್ರಮೇ=ಬೆಳ್ಳಿಯೆಂದು ಭ್ರಮೆ

ಅನುವಾದ:

ಕಪ್ಪೆಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಯಿಂದ ಮೋಹವುಂಟಾಗುವಂತೆ, ಆತ್ಮದ ಅಜ್ಞಾನದ ಭ್ರಮೆಯು ಗೋಚರವಾಗುವ ವಸ್ತುಗಳಲ್ಲಿ ಪ್ರೀತಿಯನ್ನು ಉಂಟುಮಾಡುತ್ತದೆ.
ವಿವರಣೆ:

ಅಷ್ಟಾವಕ್ರ ಮತ್ತೆ ಹೇಳುತ್ತಾನೆ - ಜನಕನ ರಾಜ್ಯ, ಧನ, ಕನಕಗಳ ಬಗ್ಗೆ ಇರುವ ಪ್ರೀತಿ ಅವುಗಳ ನಿಜ ಸ್ವರೂಪ ತಿಳಿಯದೇ ಇರುವದರಿಂದ. ಅವೆಲ್ಲವೂ ಸುಳ್ಳು, ನಮ್ಮ ಭ್ರಮೆ ಎಂದು ಅರಿವಾದ ಮೇಲೆ ಲೌಕಿಕ ವಸ್ತುಗಳ ಮೇಲೆ ಪ್ರೀತಿ ನಾಶವಾಗುತ್ತದೆ. 

ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ .
ಸೋಽಹಮಸ್ಮೀತಿ ವಿಜ್ಞಾಯ ಕಿಂ ದೀನ ಇವ ಧಾವಸಿ .. 3-3..

ಶಬ್ದಾರ್ಥ:

ವಿಶ್ವಂ=ವಿಶ್ವವು; ಸ್ಫುರತಿ=ಕಾಣುತ್ತದೆ; ಯತ್ರ+ಇದಂ=ಎಲ್ಲಿ ಇದು; ತರಂಗಾಃ=ಅಲೆಗಳು; ಇವ=ಹಾಗೆ; ಸಾಗರೇ=ಸಾಗರದಲ್ಲಿ; ಸಃ+ಅಹಂ+ಇತಿ=ಅವನು ನಾನು ಎಂದು; ವಿಜ್ಞಾಯ=ತಿಳಿದು; ಕಿಂ=ಯಾಕೆ; ದೀನ ಇವ=ದೀನನಂತೆ; ಧಾವಸಿ=ಓಡುತ್ತೀಯ

ಅನುವಾದ: 

ಯಾರಲ್ಲಿ ಬ್ರಹ್ಮಾಂಡವು ಸಮುದ್ರದ ಮೇಲಿನ ಅಲೆಗಳಂತೆ ಕಾಣಿಸುವದೋ ಅವನೇ ನೀನು ಎಂದು ತಿಳಿದಿದ್ದರೂ, ನೀನು ಯಾಕೆ ದೀನನಂತೆ ಓಡುತ್ತೀಯ?

ವಿವರಣೆ:

ನಮ್ಮ ಎಲ್ಲ ದುಃಖ, ಭಯ, ತಲ್ಲಣಗಳಿಗೆ ಕಾರಣ ವಿಶ್ವವನ್ನು ನಮ್ಮಿಂದ ಬೇರೆಯೆಂದು ಭಾವಿಸುವುದು. ಆದರೆ ವಿಶ್ವ ಬೇರೆಯಲ್ಲ - ಆತ್ಮ ಬೇರೆಯಲ್ಲ ಎಂಬ ಮಾತು ಮನನವಾದಾಗ ಎಲ್ಲ ಚಿಂತೆಗಳೂ ಮಾಯವಾಗಿ ಸುಖ, ಶಾಂತಿ, ಸಮಾಧಾನ ದೊರೆಯುವದು. 

ಶ್ರುತ್ವಾಪಿ ಶುದ್ಧಚೈತನ್ಯಂ ಆತ್ಮಾನಮತಿಸುಂದರಂ .
ಉಪಸ್ಥೇಽತ್ಯಂತಸಂಸಕ್ತೋ ಮಾಲಿನ್ಯಮಧಿಗಚ್ಛತಿ .. 3-4..

ಶಬ್ದಾರ್ಥ:

ಶ್ರುತ್ವ+ಅಪಿ=ಕೇಳಿದ ಮೇಲೂ; ಶುದ್ಧ ಚೈತನ್ಯಂ=ಶುದ್ಧ ಚೈತನ್ಯ;  ಆತ್ಮಾನಂ=ಆತ್ಮವನ್ನು;ಅತಿ ಸುಂದರಂ=ಅತಿ ಸುಂದರವಾದ; ಉಪಸ್ಥೇ=ಹತ್ತಿರ ಇರುವದರಲ್ಲಿ/ ಇಂದ್ರಿಯಗಳಲ್ಲಿ; ಅತ್ಯಂತ=ಬಹಳ; ಸಂಸಕ್ತಃ=ಪ್ರೀತಿಯುಳ್ಳವನಾಗಿ; ಮಾಲಿನ್ಯಂ=ಮಾಲಿನ್ಯವನ್ನು; ಅಧಿಗಚ್ಛತಿ=ಹೊಂದುತ್ತೀಯ

ಅನುವಾದ: 

ನೀನು ಶುದ್ಧ ಚೈತನ್ಯನೆಂದೂ, ಆತ್ಮನೂ, ಅತಿ ಸುಂದರನೆಂದೂ ಕೇಳಿ ತಿಳಿದಮೇಲೂ, ಮಲಿನವಾದ ವಿಷಯಸುಖಗಳಲ್ಲಿ ಯಾಕೆ ಆಸಕ್ತಿ ತೋರಿಸುತ್ತಿರುವೆ? (ಇನ್ನೊಂದು ಅನುವಾದ - ತಾನು ಆತ್ಮ, ಶುದ್ಧ ಪ್ರಜ್ಞೆ ಮತ್ತು ಅತ್ಯಂತ ಸುಂದರ ಎಂದು ಕೇಳಿದ ನಂತರವೂ, ದೇಹಕ್ಕೆ ಅತಿಯಾಗಿ ಅಂಟಿಕೊಂಡಿರುವವನು ಮಾಲಿನ್ಯವನ್ನು ಪಡೆಯುತ್ತಾನೆ.)

ವಿವರಣೆ:

ರಾಜಾ ಜನಕನು ತನ್ನ ಅರಮನೆಯಲ್ಲಿ ಸರ್ವಸುಖಗಳಲ್ಲಿ ಮುಳುಗುತ್ತಾನೆ. ಆದರೆ ಆತ್ಮಜ್ಞಾನಿಗೆ ವಿಷಯಸುಖಗಳಲ್ಲಿ ಹೇಗೆ ತಾನೇ ಆಸಕ್ತಿ ಉಂಟಾಗುತ್ತದೆ. ವಿಷಯಾಸಕ್ತಿ ಮನಸ್ಸನ್ನು ಅಶುದ್ಧ ಹಾಗೂ ಮಲಿನವನ್ನಾಗಿಸುತ್ತದೆ. 

ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ .
ಮುನೇರ್ಜಾನತ ಆಶ್ಚರ್ಯಂ ಮಮತ್ವಮನುವರ್ತತೇ .. 3-5..

ಶಬ್ದಾರ್ಥ:
ಸರ್ವಭೂತೇಷು=ಎಲ್ಲ ಜೀವಿಗಳಲ್ಲಿ; =ಹಾಗೂ; ಆತ್ಮಾನಂ=ಆತ್ಮನನ್ನು, ತನ್ನನ್ನು; ಸರ್ವಭೂತಾನಿ=ಎಲ್ಲ ಜೀವಿಗಳನ್ನು; =ಹಾಗೂ; ಆತ್ಮನಿ=ಆತ್ಮದಲ್ಲಿ, ತನ್ನಲ್ಲಿ; ಮುನೇಃ=ಮುನಿಯ; ಜಾನತಃ=ತಿಳಿದುಕೊಂಡ; ಆಶ್ಚರ್ಯಂ=ಆಶ್ಚರ್ಯ; ಮಮತ್ವಂ=ತನ್ನತನವನ್ನು; ಅನುವರ್ತತೇ=ಮುಂದುವರಿಸುತ್ತಾನೆ

ಅನುವಾದ:

ಸರ್ವಭೂತಗಳಲ್ಲೂ ತಾನು ಇರುವಾಗ, ತನ್ನಲ್ಲಿ ಸರ್ವಭೂತಗಳೂ ಇರುವಾಗ, ಅದನ್ನು ತಿಳಿದನಂತರವೂ ಮುನಿಯು ಮಮತ್ವವನ್ನು (ನಾನು, ನನ್ನದು ಎಂಬ ಮೋಹ) ಇನ್ನೂ ಉಳಿಸಿಕೊಳ್ಳುವದು ಆಶ್ಚರ್ಯವೇ.
ವಿವರಣೆ:

ನನ್ನತನ - ಅಹಂ ಭಾವನೆ ಹೇಳುತ್ತದೆ - ಈ ಶರೀರ ನನ್ನದು, ಈ ಹೆಂಡತಿ, ಮಕ್ಕಳು ನನ್ನವು, ಈ ಮನೆ-ಮಠ ನನ್ನದು. ಅದರಿಂದ ಮೋಹ ಉಂಟಾಗುತ್ತದೆ. ಆದರೆ ಸಕಲ ಜೀವಿಗಳಲ್ಲೂ ಪರಮಾತ್ಮನೇ ಇರುವನು - ಆ ಪರಮಾತ್ಮ ಇರುವದು ತನ್ನೊಳಗೂ. ಇದನ್ನು ಅರಿತನಂತರ ಈ ಅಹಂ-ಕಾರ ಮಾಯವಾಗಬೇಕಲ್ಲ. ಹೀಗೆಂದು ಅಷ್ಟಾವಕ್ರ ರಾಜಾ ಜನಕನು ಇನ್ನೂ ರಾಜ್ಯಭಾರವನ್ನು ಮುಂದುವರಿಸುವದರ ಬಗ್ಗೆ ಹೇಳುತ್ತಾನೆ. 

ಆಸ್ಥಿತಃ ಪರಮಾದ್ವೈತಂ ಮೋಕ್ಷಾರ್ಥೇಽಪಿ ವ್ಯವಸ್ಥಿತಃ .
ಆಶ್ಚರ್ಯಂ ಕಾಮವಶಗೋ ವಿಕಲಃ ಕೇಲಿಶಿಕ್ಷಯಾ .. 3-6..
ಪರಮ ಅದ್ವೈತದಲ್ಲಿ ಸ್ಥಿತನಾಗಿ, ಮೋಕ್ಷಾರ್ಥವನ್ನು ಪಡೆಯುವ ಪ್ರಯತ್ನದಲ್ಲಿರುವವನೂ ಸಹ ಕಾಮದ ಪಾಶದಿಂದ, ನಾನಾ ರೀತಿಯ ವಿಷಯ ವಿಕಾರಗಳಿಂದ ದುರ್ಬಲನಾಗುವದು ನಿಜಕ್ಕೂ ಆಶ್ಚರ್ಯವೇ.

ಉದ್ಭೂತಂ ಜ್ಞಾನದುರ್ಮಿತ್ರಮವಧಾರ್ಯಾತಿದುರ್ಬಲಃ .
ಆಶ್ಚರ್ಯಂ ಕಾಮಮಾಕಾಂಕ್ಷೇತ್ ಕಾಲಮಂತಮನುಶ್ರಿತಃ .. 3-7..
ಈಗಾಗಲೇ ದುರ್ಬಲನಾದ ಮನುಷ್ಯನು, ಕಾಮವು ಜ್ಞಾನದ ಶತ್ರುವೆಂದು ಅರಿತಿದ್ದರೂ, ಅಂತಿಮ ಕಾಲ ಹತ್ತಿರ ಬರುತ್ತಿದ್ದರೂ ಸಹ, ಕಾಮಾಕಾಂಕ್ಷಿಯಾಗುವದು ಆಶ್ಚರ್ಯವೇ ಸರಿ.

ಇಹಾಮುತ್ರ ವಿರಕ್ತಸ್ಯ ನಿತ್ಯಾನಿತ್ಯವಿವೇಕಿನಃ .
ಆಶ್ಚರ್ಯಂ ಮೋಕ್ಷಕಾಮಸ್ಯ ಮೋಕ್ಷಾದ್ ಏವ ವಿಭೀಷಿಕಾ .. 3-8..

ಅಮುತ್ರ=ಅಲ್ಲಿ, ಪರಲೋಕದಲ್ಲಿ ವಿಭೀಷಿಕಾ = ಭಯಭೀತ

ಇಹ-ಪರಗಳಲ್ಲಿ ವಿರಕ್ತನಾದವನು, ನಿತ್ಯಾನಿತ್ಯಗಳ ವಿವೇಕವನ್ನು ತಿಳಿದವನು, ಮೋಕ್ಷದ ವಾಂಛೆಯನ್ನು ಹೊಂದಿರುವವನು, ಮೋಕ್ಷದಿಂದಲೇ ಭಯ-ಭೀತನಾಗುವದು ಆಶ್ಚರ್ಯವೇ ಸರಿ.

ಧೀರಸ್ತು ಭೋಜ್ಯಮಾನೋಽಪಿ ಪೀಡ್ಯಮಾನೋಽಪಿ ಸರ್ವದಾ .
ಆತ್ಮಾನಂ ಕೇವಲಂ ಪಶ್ಯನ್ ನ ತುಷ್ಯತಿ ನ ಕುಪ್ಯತಿ .. 3-9..

ತುಷ್ಯತಿ=ಸಂತೋಷ ಪಡುತ್ತಾನೆ ಕುಪ್ಯತಿ=ಕೋಪಗೊಳ್ಳುತ್ತಾನೆ

ಧೀರನಾದರೋ ಭೋಗದಲ್ಲಿದ್ದರೂ, ಅಥವಾ ಪೀಡೆಯಲ್ಲಿದ್ದರೂ, ಕೇವಲ ಆತ್ಮವನ್ನಷ್ಟೇ ನೋಡುತ್ತಾ, ಸಂತಸ ಪಡುವದೂ ಇಲ್ಲ, ಕೋಪಿಸಿಕೊಳ್ಳುವದೂ ಇಲ್ಲ.

ಚೇಷ್ಟಮಾನಂ ಶರೀರಂ ಸ್ವಂ ಪಶ್ಯತ್ಯನ್ಯಶರೀರವತ್ .
ಸಂಸ್ತವೇ ಚಾಪಿ ನಿಂದಾಯಾಂ ಕಥಂ ಕ್ಷುಭ್ಯೇತ್ ಮಹಾಶಯಃ .. 3-10..

ಸಂಸ್ತವೇ=ಹೊಗಳುವಿಕೆಯಲ್ಲಿ ಚೇಷ್ಟಮಾನಂ=ನೋಡುತ್ತ, ನಟಿಸುತ್ತ

ತನ್ನ ಶರೀರವನ್ನು ಅನ್ಯರ ಶರೀರದಂತೆ ಭಾವಿಸಿ ಸಾಕ್ಷಿಯಂತೆ ನೋಡುತ್ತಿರುವ ಮಹಾನುಭಾವನು, ಹೊಗಳುವಿಕೆಯಿಂದ ಅಥವಾ ನಿಂದೆಯಿಂದ, ಹೇಗೆ ತಾನೇ ಕ್ಷೋಭೆಗೊಳ್ಳುತ್ತಾನೆ?

ಮಾಯಾಮಾತ್ರಮಿದಂ ವಿಶ್ವಂ ಪಶ್ಯನ್ ವಿಗತಕೌತುಕಃ .
ಅಪಿ ಸನ್ನಿಹಿತೇ ಮೃತ್ಯೌ ಕಥಂ ತ್ರಸ್ಯತಿ ಧೀರಧೀಃ .. 3-11..

ವಿಗತಕೌತುಕಃ=ಕೌತುಕವಿಲ್ಲದೆ ತ್ರಸ್ಯತಿ=ಭಯದಿಂದ ನಡುಗುತ್ತಾನೆ

ಈ ವಿಶ್ವವೇ ಬರೀ ಮಾಯೆಯೆಂದು ತಿಳಿದು, ಯಾವ ಆಸಕ್ತಿಯನ್ನೂ ಹೊಂದದೇ ಇರುವ ಧೀರ ಮಾನವನು, ಮೃತ್ಯುವು ಸನಿಹವಾದಾಗ ಕೂಡ ಹೇಗೆ ತಾನೇ ಭಯಪಡುತ್ತಾನೆ?

ನಿಃಸ್ಪೃಹಂ ಮಾನಸಂ ಯಸ್ಯ ನೈರಾಶ್ಯೇಽಪಿ ಮಹಾತ್ಮನಃ .
ತಸ್ಯಾತ್ಮಜ್ಞಾನತೃಪ್ತಸ್ಯ ತುಲನಾ ಕೇನ ಜಾಯತೇ .. 3-12..

ಯಾವ ಮಹಾತ್ಮನು ನಿರಾಶೆಯಲ್ಲೂ ಸಹ ಸ್ಥಿತಪ್ರಜ್ಞನಾಗಿರುತ್ತಾನೋ, ಆತ್ಮಜ್ಞಾನದಿಂದ ತೃಪ್ತನಾಗಿರುತ್ತಾನೋ, ಅಂತಹವನನ್ನು ಯಾರಿಗೂ ಹೋಲಿಸಲಾಗುವದಿಲ್ಲ.

ಸ್ವಭಾವಾದ್ ಏವ ಜಾನಾನೋ ದೃಶ್ಯಮೇತನ್ನ ಕಿಂಚನ .
ಇದಂ ಗ್ರಾಹ್ಯಮಿದಂ ತ್ಯಾಜ್ಯಂ ಸ ಕಿಂ ಪಶ್ಯತಿ ಧೀರಧೀಃ .. 3-13..
ಸ್ಥಿತಪ್ರಜ್ಞನಾದ ಧೀರನು, ಸಕಲ ವಿಶ್ವವೆಲ್ಲವು ಶೂನ್ಯವೆಂದು ತಿಳಿದವನಾಗಿರುವದರಿಂದ, ಇದನ್ನು ಗ್ರಹಿಸಬೇಕು, ಅದನ್ನು ತ್ಯಜಿಸಬೇಕು ಎಂದು ಯಾಕೆ ಯೋಚಿಸುತ್ತಾನೆ?

ಅಂತಸ್ತ್ಯಕ್ತಕಷಾಯಸ್ಯ ನಿರ್ದ್ವಂದ್ವಸ್ಯ ನಿರಾಶಿಷಃ .
ಯದೃಚ್ಛಯಾಗತೋ ಭೋಗೋ ನ ದುಃಖಾಯ ನ ತುಷ್ಟಯೇ .. 3-14..
ಆಂತರಿಕವಾಗಿ ಕಲ್ಮಶಗಳಿಂದ, ದ್ವಂದ್ವಗಳಿಂದ ಮತ್ತು ಬಯಕೆಗಳಿಂದ ಮುಕ್ತನಾದವನಿಗೆ, ಆಕಸ್ಮಿಕವಾಗಿ ಬರುವ ಯಾವುದೇ ಅನುಭವವು ದುಃಖವನ್ನು ಉಂಟುಮಾಡುವುದಿಲ್ಲ ಅಥವಾ ತೃಪ್ತಿಯನ್ನು ತರುವುದಿಲ್ಲ.

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....