ಅಷ್ಟಾವಕ್ರಗೀತೆ - ೧೪

 ಶಾಂತಿ

ಜನಕ ಉವಾಚ- 

ಪ್ರಕೃತ್ಯಾ ಶೂನ್ಯಚಿತ್ತೋ ಯಃ ಪ್ರಮಾದಾದ್ ಭಾವಭಾವನಃ .
ನಿದ್ರಿತೋ ಬೋಧಿತ ಇವ ಕ್ಷೀಣಸಂಸ್ಮರಣೋ ಹಿ ಸಃ .. ೧೪-೧..

ಯಾರು ವಿಷಯಗಳಲ್ಲಿ ಸ್ವಭಾವತಃ ಶೂನ್ಯಚಿತ್ತನಾಗಿ, ರಾಗ-ದ್ವೇಷಗಳಿಂದ ಮುಕ್ತನಾಗಿರುತ್ತಾನೋ, ಅವನು ಪ್ರಮಾದವಶಾತ್ ವಿಷಯ ರಾಗ ದ್ವೇಷಗಳ ಬಗ್ಗೆ ಯೋಚಿಸಿದರೂ,   ನಿದ್ರಿತನಾದವನಾದರೂ ಜಾಗೃತನಂತೆ ಅವನು ಆ ರಾಗ-ದ್ವೇಷಗಳಿಂದ ಪರಿಣಾಮಿತನಾಗುವದಿಲ್ಲ.

ಕ್ವ ಧನಾನಿ ಕ್ವ ಮಿತ್ರಾಣಿ ಕ್ವ ಮೇ ವಿಷಯದಸ್ಯವಃ .
ಕ್ವ ಶಾಸ್ತ್ರಂ ಕ್ವ ಚ ವಿಜ್ಞಾನಂ ಯದಾ ಮೇ ಗಲಿತಾ ಸ್ಪೃಹಾ .. ೧೪-೨..

ನನ್ನಲ್ಲಿ ಆಸೆಗಳು ನಾಶವಾಗಿ ಹೋದ ಮೇಲೆ, ಧನವೆಲ್ಲಿ, ಮಿತ್ರರೆಲ್ಲಿ, ಲೌಕಿಕ ಆಸೆಗಳ ರೂಪದ ಕಳ್ಳರೆಲ್ಲಿ, ಶಾಸ್ತ್ರವೆಲ್ಲಿ, ಜ್ಞಾನ-ವಿಜ್ಞಾನವೆಲ್ಲಿ? (ಆತ್ಮಸಾಕ್ಷಾತ್ಕಾರವಾದ ಮೇಲೆ ನನಗೆ ಇವು ಯಾವುದರಲ್ಲೂ ಆಸಕ್ತಿಯೇ ಉಳಿದಿಲ್ಲ.) 

ವಿಜ್ಞಾತೇ ಸಾಕ್ಷಿಪುರುಷೇ ಪರಮಾತ್ಮನಿ ಚೇಶ್ವರೇ .
ನೈರಾಶ್ಯೇ ಬಂಧಮೋಕ್ಷೇ ಚ ನ ಚಿಂತಾ ಮುಕ್ತಯೇ ಮಮ .. ೧೪-೩..

ಸಾಕ್ಷಿಪುರುಷನಾದ, ಪರಮಾತ್ಮನಾದ ಈಶ್ವರನನ್ನು ಅರಿತ ಮೇಲೆ, ನನಗೆ ಮೋಕ್ಷದಲ್ಲಿ ಆಸಕ್ತಿಯಿಲ್ಲ. ಮುಕ್ತಿ ದೊರಕಬೇಕೆಂಬ ಚಿಂತೆ ಕೂಡ ಇಲ್ಲ.

ಎಲ್ಲಾ ಆಸೆಗಳಂತೆ ಮುಕ್ತಿ ದೊರಕಬೇಕೆಂಬುದೂ ಆಸೆಯೇ. ಆದರೆ ಪರಮಾತ್ಮನನ್ನು ಅರಿತಮೇಲೆ ನನಗೆ ಮುಕ್ತಿಯ ಬಯಕೆಯೂ ಇಲ್ಲ. 

ಅಂತರ್ವಿಕಲ್ಪಶೂನ್ಯಸ್ಯ ಬಹಿಃ ಸ್ವಚ್ಛಂದಚಾರಿಣಃ .
ಭ್ರಾಂತಸ್ಯೇವ ದಶಾಸ್ತಾಸ್ತಾಸ್ತಾದೃಶಾ ಏವ ಜಾನತೇ .. ೧೪-೪..

ಅಂತರಂಗದಲ್ಲಿ ವಿಕಲ್ಪರಹಿತನಾದವನು, ಬಾಹ್ಯದಲ್ಲಿ ಭ್ರಾಂತನಂತೆ ಸ್ವಚ್ಛಂದದಿಂದ ವ್ಯವಹರಿಸಿದರೂ ಸಹ, ಅವನು ಪರಿಸ್ಥಿತಿಯನ್ನು ಅವನಂತವರು (ಅವನಂತೆ ಆತ್ಮಸಾಕ್ಷಾತ್ಕಾರವಾದವರು) ಮಾತ್ರ ಅರಿಯಲು ಸಾಧ್ಯ. (ಅಂತಹ ಜ್ಞಾನಿಯನ್ನು ಅರಿಯಲು ಅಜ್ಞಾನಿಗಳಿಂದ ಸಾಧ್ಯವಿಲ್ಲ).


ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತೆ - ೧೩

ಅಷ್ಟಾವಕ್ರಗೀತಾ - ೩