Skip to main content

ಅಷ್ಟಾವಕ್ರಗೀತೆ - ೧೩

ಸಂತೋಷ

ಜನಕ ಉವಾಚ- 

ಅಕಿಂಚನಭವಂ ಸ್ವಾಸ್ಥ್ಯಂ ಕೌಪೀನತ್ವೇಽಪಿ ದುರ್ಲಭಂ .
ತ್ಯಾಗಾದಾನೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೧.. 

ರಾಜಾ ಜನಕನು ತನ್ನ ಸ್ಥಿತಿಯನ್ನು ವಿವರಿಸುತ್ತ ಹೀಗೆ ಮುಂದುವರಿಸುತ್ತಾನೆ.

(ಆತ್ಮದ ಹೊರತು)ಇನ್ನೇನೂ ಇಲ್ಲ ಎಂಬ ಭಾವನೆ, ಆ ವೈರಾಗ್ಯ, ಕೌಪೀನಧಾರಿಯಾದರೂ (ಎಲ್ಲ ತ್ಯಜಿಸಿ ಕೌಪೀನ ಮಾತ್ರ ಧರಿಸಿದರೂ) ದೊರಕುವದು ದುರ್ಲಭ. ಆದ್ದರಿಂದ ನಾನು ತ್ಯಾಗವನ್ನೂ, ಸ್ವೀಕರಿಸುವದನ್ನೂ ಎರಡನ್ನು ಬಿಟ್ಟು ಸುಖದಿಂದಿದ್ದೇನೆ.

ಕುತ್ರಾಪಿ ಖೇದಃ ಕಾಯಸ್ಯ ಜಿಹ್ವಾ ಕುತ್ರಾಪಿ ಖಿದ್ಯತೇ .
ಮನಃ ಕುತ್ರಾಪಿ ತತ್ತ್ಯಕ್ತ್ವಾ ಪುರುಷಾರ್ಥೇ ಸ್ಥಿತಃ ಸುಖಂ .. ೧೩-೨.. 

ಎಲ್ಲೋ ಒಂದೆಡೆ ಶರೀರದ ಬಾಧೆ (ಸಾಧನೆ ಮಾಡುವಾಗ), ಇನ್ನೆಲ್ಲೋ ಒಂದು ಕಡೆ ನಾಲಿಗೆಯ ಬಾಧೆ (ಶಾಸ್ತ್ರಗಳ ವಾಚನ ಮಾಡುವಾಗ), ಮತ್ತೆಲ್ಲೋ ಒಂದೆಡೆ ಮನಸ್ಸಿನ ಬಾಧೆ (ಧ್ಯಾನ ಮಾಡುವಾಗ), ಈ ಎಲ್ಲ ಬಾಧೆಗಳನ್ನೂ ತ್ಯಜಿಸಿ ನಾನು ಪುರುಷಾರ್ಥದಲ್ಲಿ ಸುಖವಾಗಿದ್ದೇನೆ.

ಮನಸ್ಸು, ಶರೀರಗಳನ್ನು ತಪಸ್ಸಿನಲ್ಲಿ ತೊಡಗಿಸಿದಾಗ ನೋವು, ಬಾಧೆಗಳು ಸಹಜ. ಆದರೆ ಅವೆಲ್ಲವೂ ನನಗಲ್ಲ ಎಂಬ ನಿರಾಳತೆಯಿಂದ ಸುಖದಲ್ಲಿ ಇರುತ್ತೇನೆ.

ಕೃತಂ ಕಿಮಪಿ ನೈವ ಸ್ಯಾದ್ ಇತಿ ಸಂಚಿಂತ್ಯ ತತ್ತ್ವತಃ .
ಯದಾ ಯತ್ಕರ್ತುಮಾಯಾತಿ ತತ್ ಕೃತ್ವಾಸೇ ಯಥಾಸುಖಂ .. ೧೩-೩.. 

ತತ್ವಶ: ನೋಡಿದರೆ, ಯಾವ ಕರ್ಮವೂ ಆತ್ಮನಿಂದ ಕೃತವಲ್ಲ (ಎಲ್ಲ ಶರೀರ, ಮನ, ಬುದ್ಧಿಗಳು ಮಾಡಿದ್ದು - ಆತ್ಮವಲ್ಲ) ಎಂಬುದನ್ನು  ಅರಿತು, ಯಾವುದು ಕಾರ್ಯವು ನನ್ನ ಪಾಲಿಗೆ ಬರುವದೋ ಆ ಕಾರ್ಯವನ್ನು ಮಾಡಿಕೊಂಡು ಸುಖವಾಗಿದ್ದೇನೆ. 

ಕರ್ಮನೈಷ್ಕರ್ಮ್ಯನಿರ್ಬಂಧಭಾವಾ ದೇಹಸ್ಥಯೋಗಿನಃ .
ಸಂಯೋಗಾಯೋಗವಿರಹಾದಹಮಾಸೇ ಯಥಾಸುಖಂ .. ೧೩-೪.. 

ಕರ್ಮ, ನೈಷ್ಕರ್ಮ ಇವು ದೇಹವನ್ನು ನಂಟಿಕೊಂಡಿರುವ ಯೋಗಿಗಳಿಗೆ ಸಂಬಂಧಿಸುತ್ತದೆ. ನನಗೆ ದೇಹದ ನಂಟಿಲ್ಲ, ಹಾಗಾಗಿ ಕರ್ಮ ನಿಷ್ಕರ್ಮಗಳ ಬಂಧನವೂ ಇಲ್ಲ. ನನಗೆ ದೇಹದ ಬಾಂಧವ್ಯವಿಲ್ಲ ಅಥವಾ ಬೇರ್ಪಡಿಸುವಿಕೆಯೂ ಇಲ್ಲ. ನಾನು ಹಾಗಾಗಿ ಸುಖವಾಗಿದ್ದೇನೆ.

ಅರ್ಥಾನರ್ಥೌ ನ ಮೇ ಸ್ಥಿತ್ಯಾ ಗತ್ಯಾ ನ ಶಯನೇನ ವಾ .
ತಿಷ್ಠನ್ ಗಚ್ಛನ್ ಸ್ವಪನ್ ತಸ್ಮಾದಹಮಾಸೇ ಯಥಾಸುಖಂ .. ೧೩-೫.. 

ನಾನು ನಿಂತಿರಲಿ, ಕುಳಿತಿರಲಿ, ಹೋಗುತ್ತಿರಲಿ, ಮಲಗಿರಲಿ,  ಇವುಗಳಿಂದ ನನಗೆ ಯಾವುದೇ ಲಾಭ-ಹಾನಿಗಳಿಲ್ಲ. ಕುಳಿತು, ಹೋಗಿ, ಮಲಗಿ ಏನು ಮಾಡುತ್ತಿದ್ದರೂ ನಾನು ಸುಖವಾಗಿದ್ದೇನೆ. (ಲಾಭ ಹಾನಿಗಳೆಲ್ಲ ಶರೀರ-ಬುದ್ಧಿಯ ಕ್ರಿಯೆಯ ಪರಿಣಾಮಗಳು. ಅವುಗಳು ಆತ್ಮಕ್ಕೆ, ಆತ್ಮ ಸಾಕ್ಷಾತ್ಕಾರವಾದವನಿಗೆ ಯಾವುದೇ ಪರಿಣಾಮ ಉಂಟು ಮಾಡುವದಿಲ್ಲ.)

ಸ್ವಪತೋ ನಾಸ್ತಿ ಮೇ ಹಾನಿಃ ಸಿದ್ಧಿರ್ಯತ್ನವತೋ ನ ವಾ .
ನಾಶೋಲ್ಲಾಸೌ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೬.. 

ಮಲಗಿದ್ದರೆ ನನಗೆ ಹಾನಿ ಇಲ್ಲ. ಎದ್ದು ಪ್ರಯತ್ನಶೀಲನಾದರೆ ನನಗೆ ಯಾವುದೇ ಲಾಭ ಇಲ್ಲ. ಉಲ್ಲಾಸ ಮತ್ತು ನಾಶವನ್ನು ತ್ಯಜಿಸಿ ನಾನು ಸಂತೋಷವಾಗಿ ಬದುಕಿದ್ದೇನೆ.

ಸುಖಾದಿರೂಪಾ ನಿಯಮಂ ಭಾವೇಷ್ವಾಲೋಕ್ಯ ಭೂರಿಶಃ .
ಶುಭಾಶುಭೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೭.. 

ಸುಖ-ದುಃಖಗಳ ಕ್ಷಣಭಂಗುರತೆಯನ್ನು ಬೇರೆ ಬೇರೆ ಪರಿಸ್ಥಿತಿಯಲ್ಲಿ, ಪದೇ ಪದೇ ನೋಡಿ, ಶುಭ-ಅಶುಭಗಳನ್ನು ತ್ಯಜಿಸಿ ನಾನು ಸುಖದಿಂದ ಜೀವಿಸುತ್ತಿದ್ದೇನೆ.


ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....