Skip to main content

ಅಷ್ಟಾವಕ್ರಗೀತೆ -೧೫

ಆತ್ಮ ಜ್ಞಾನ  

ಅಷ್ಟಾವಕ್ರ ಉವಾಚ ..

ಯಥಾತಥೋಪದೇಶೇನ ಕೃತಾರ್ಥಃ ಸತ್ತ್ವಬುದ್ಧಿಮಾನ್ .
ಆಜೀವಮಪಿ ಜಿಜ್ಞಾಸುಃ ಪರಸ್ತತ್ರ ವಿಮುಹ್ಯತಿ .. ೧೫-೧..

ಶುದ್ಧ ಬುದ್ಧಿವಂತನು ಹೇಗೋ ಹೇಗೋ ಮಾಡಿದ ಅಲ್ಪ ಸ್ವಲ್ಪ ಉಪದೇಶದಿಂದಲಾದರೂ, ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆ. ಆದರೆ (ರಜೋ-ತಮೋ ಗುಣಗಳಿಂದ ಪೀಡಿತನಾದ) ಇತರನು ಆಜೀವಪರ್ಯಂತ ಕಷ್ಟಪಟ್ಟರೂ ಅವನಿಗೆ ಆತ್ಮದ ತತ್ವ ತಿಳಿಯದೇ, ಬರಿದೇ ದಿಗ್ಭ್ರಮೆಗೊಳ್ಳುತ್ತಾನೆ.

ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ .
ಏತಾವದೇವ ವಿಜ್ಞಾನಂ ಯಥೇಚ್ಛಸಿ ತಥಾ ಕುರು .. ೧೫-೨..

ವಿಷಯಾಸಕ್ತಿ ಮೋಕ್ಷದ ಪರಮ ವೈರಿ. ಭೋಗಾಸಕ್ತಿಯೇ ಬಂಧನಕ್ಕೆ ಕಾರಣ. ಇದನ್ನು ತಿಳಿದು, ನಿನ್ನ ಇಚ್ಛೆಯಂತೆ ಮಾಡು.

ವಾಗ್ಮಿಪ್ರಾಜ್ಞಾಮಹೋದ್ಯೋಗಂ ಜನಂ ಮೂಕಜಡಾಲಸಂ .
ಕರೋತಿ ತತ್ತ್ವಬೋಧೋಽಯಮತಸ್ತ್ಯಕ್ತೋ ಬುಭುಕ್ಷಭಿಃ .. ೧೫-೩..

ಈ ತತ್ವಬೋಧವು ವಾಗ್ಮಿ, ಪ್ರಾಜ್ಞ, ಉದ್ಯಮಶೀಲ ಜನರನ್ನು ಮೌನಿಗಳಾಗಿ, ಜಡರನ್ನಾಗಿ, ನಿಷ್ಕ್ರಿಯರನ್ನಾಗಿ ಮಾಡುತ್ತದೆ. (ಆತ್ಮ ಸಾಕ್ಷಾತ್ಕಾರವಾದ ಮೇಲೆ ಇನ್ನೇನೂ ಸಾಧಿಸಲು,  ಮಾತನಾಡಲು, ಕ್ರಿಯೆ ಮಾಡಲು ಉಳಿಯುವದಿಲ್ಲ. ಅದಕ್ಕಾಗಿ ಅಂತಹ ಜ್ಞಾನಿಯು ಬಾಹ್ಯದಲ್ಲಿ ಮೂಕನಾಗಿ, ನಿಷ್ಕ್ರಿಯನಾಗಿ, ಜಡನಾಗುತ್ತಾನೆ). ಅದಕ್ಕಾಗಿಯೇ ಬುಭುಕ್ಷಗಳು (ಭೋಗಾಸಕ್ತರು) ಈ ಜ್ಞಾನವನ್ನು ದೂರವಿಡುತ್ತಾರೆ. 

ನ ತ್ವಂ ದೇಹೋ ನ ತೇ ದೇಹೋ ಭೋಕ್ತಾ ಕರ್ತಾ ನ ವಾ ಭವಾನ್ .
ಚಿದ್ರೂಪೋಽಸಿ ಸದಾ ಸಾಕ್ಷೀ ನಿರಪೇಕ್ಷಃ ಸುಖಂ ಚರ .. ೧೫-೪..

ನೀನು ದೇಹವಲ್ಲ, ನಿನ್ನ ದೇಹವೂ ಅಲ್ಲ. ನೀನು ಕಾರ್ಯ ಮಾಡುವವನೂ ಅಲ್ಲ, ಆನಂದಿಸುವವನೂ ಅಲ್ಲ. ನೀನು ಕೇವಲ ಸಾಕ್ಷಿ, ಮುಕ್ತನು, ಚಿತ್ ರೂಪಿಯು. (ಇದನ್ನು ತಿಳಿದು) ಸುಖದಿಂದ ವಿಹರಿಸು.

ರಾಗದ್ವೇಷೌ ಮನೋಧರ್ಮೌ ನ ಮನಸ್ತೇ ಕದಾಚನ .
ನಿರ್ವಿಕಲ್ಪೋಽಸಿ ಬೋಧಾತ್ಮಾ ನಿರ್ವಿಕಾರಃ ಸುಖಂ ಚರ .. ೧೫-೫..

ರಾಗ-ದ್ವೇಷಗಳು ಮನೋಧರ್ಮಗಳು. (ಆದರೆ) ಮನಸ್ಸು ನಿನ್ನದಲ್ಲ. ನೀನು  ಜ್ಞಾನಿಯಾದ ಆತ್ಮ. ನೀನು ನಿರ್ವಿಕಾರಿ, ನಿರ್ವಿಕಲ್ಪ ಆತ್ಮ. (ಇದನ್ನು ತಿಳಿದು) ಸುಖದಿಂದ ವಿಹರಿಸು.

ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ .
ವಿಜ್ಞಾಯ ನಿರಹಂಕಾರೋ ನಿರ್ಮಮಸ್ತ್ವಂ ಸುಖೀ ಭವ .. ೧೫-೬..

ಸರ್ವಭೂತಗಳಲ್ಲಿ ನಿನ್ನನ್ನು ಕಂಡು, ನಿನ್ನಲ್ಲಿ ಸರ್ವಭೂತಗಳನ್ನು ಕಂಡು, ನಿರಹಂಕಾರಿಯಾಗಿ, ನಿರ್ಮಮನಾಗಿ ಸುಖಿಯಾಗು.

ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ .
ತತ್ತ್ವಮೇವ ನ ಸಂದೇಹಶ್ಚಿನ್ಮೂರ್ತೇ ವಿಜ್ವರೋ ಭವ .. ೧೫-೭..

ಸಾಗರದಲ್ಲಿ ಅಲೆಗಳು ಪ್ರಕಟವಾದಂತೆ, ಯಾವುದರಲ್ಲಿ ಈ ವಿಶ್ವ ಪ್ರಕಟವಾಗುವದೋ ಅದೇ ನೀನಾಗಿರುವೆ. ಓ, ಚಿನ್ಮೂರ್ತಿ, ಸಂದೇಹವಿಲ್ಲದೇ ಜ್ವರರಹಿತನಾಗು(ಸಂಸಾರ ಬಂಧನವೆಂಬ ಜ್ವರ).

ಶ್ರದ್ಧಸ್ವ ತಾತ ಶ್ರದ್ಧಸ್ವ ನಾತ್ರ ಮೋಹಂ ಕುರುಷ್ವ ಭೋಃ .
ಜ್ಞಾನಸ್ವರೂಪೋ ಭಗವಾನಾತ್ಮಾ ತ್ವಂ ಪ್ರಕೃತೇಃ ಪರಃ .. ೧೫-೮..

ನಂಬು, ಮಗು, ನಂಬು. ಈ ವಿಷಯದಲ್ಲಿ ಭ್ರಮೆ ಬೇಡ. ನೀನು ಜ್ಞಾನಸ್ವರೂಪ, ನೀನು ಭಗವಂತ, ನೀನು ಆತ್ಮ, ನೀನು ಪ್ರಕೃತಿಗಿಂತ ಅತೀತ.

ಗುಣೈಃ ಸಂವೇಷ್ಟಿತೋ ದೇಹಸ್ತಿಷ್ಠತ್ಯಾಯಾತಿ ಯಾತಿ ಚ .
ಆತ್ಮಾ ನ ಗಂತಾ ನಾಗಂತಾ ಕಿಮೇನಮನುಶೋಚಸಿ .. ೧೫-೯..  

ಗುಣಗಳಿಂದ ತುಂಬಿದ ಈ ದೇಹ ಈ ಜಗತ್ತಿಗೆ ಬರುತ್ತದೆ, ಸ್ವಲ್ಪ ಸಮಯ ಇಲ್ಲಿ ಇರುತ್ತದೆ ಹಾಗೂ ಮರಳಿ ಹೋಗುತ್ತದೆ. ಆದರೆ ಆತ್ಮ ಎಲ್ಲಿಗೂ ಬರುವದೂ ಇಲ್ಲ, ಹೋಗುವದೂ ಇಲ್ಲ. ಹೀಗಿರುವಾಗ ಅದಕ್ಕಾಗಿ (ಆ ನಶ್ವರ ಶರೀರಕ್ಕಾಗಿ) ಯಾಕೆ ಶೋಕ ಪಡುತ್ತೀಯಾ?

ದೇಹಸ್ತಿಷ್ಠತು ಕಲ್ಪಾಂತಂ ಗಚ್ಛತ್ವದ್ಯೈವ ವಾ ಪುನಃ .
ಕ್ವ ವೃದ್ಧಿಃ ಕ್ವ ಚ ವಾ ಹಾನಿಸ್ತವ ಚಿನ್ಮಾತ್ರರೂಪಿಣಃ .. ೧೫-೧೦..

ದೇಹ ಒಂದು ಯುಗವಾದರೂ ಇರಲಿ, ಅಥವಾ ಈಗಲೇ ನಾಶವಾಗಲಿ, ಚಿತ್ ಸ್ವರೂಪನಾದ ನಿನಗೆ ಅದರಿಂದ ಆಗುವ ಲಾಭವಾದರೂ ಏನು ಅಥವಾ ಹಾನಿಯಾದರೂ ಏನು?

ತ್ವಯ್ಯನಂತಮಹಾಂಭೋಧೌ ವಿಶ್ವವೀಚಿಃ ಸ್ವಭಾವತಃ .
ಉದೇತು ವಾಸ್ತಮಾಯಾತು ನ ತೇ ವೃದ್ಧಿರ್ನ ವಾ ಕ್ಷತಿಃ .. ೧೫-೧೧..

ವಿಶ್ವವೆಂಬ ಅಲೆಗಳು ಸ್ವಭಾವಸಹಜವಾಗಿ ಉದಯಿಸಿಲಿ, ನಾಶವಾಗಲಿ, ಅನಂತ ಮಹಾಸಾಗರವಾದ ನಿನಗೆ ಯಾವ ಲಾಭ ಅಥವಾ ಹಾನಿಯಾಗುವದಿಲ್ಲ.

 ತಾತ ಚಿನ್ಮಾತ್ರರೂಪೋಽಸಿ ನ ತೇ ಭಿನ್ನಮಿದಂ ಜಗತ್ .
ಅತಃ ಕಸ್ಯ ಕಥಂ ಕುತ್ರ ಹೇಯೋಪಾದೇಯಕಲ್ಪನಾ .. ೧೫-೧೨..

ಮಗು, ನೀನು ಕೇವಲ ಚಿತ್ ಸ್ವರೂಪನಾಗಿರುವೆ, ಜಗತ್ತು ನಿನ್ನೊಳಗೇ ಲೀನವಾಗಿದೆಯೇ ಹೊರತು ಬೇರೆಯಲ್ಲ. ಹೀಗಿರುವಾಗ ಜಗದ ಒಳಿತು ಕೆಡುಕುಗಳ ಕಲ್ಪನೆ ಯಾಕೆ?

 ಏಕಸ್ಮಿನ್ನವ್ಯಯೇ ಶಾಂತೇ ಚಿದಾಕಾಶೇಽಮಲೇ ತ್ವಯಿ .
ಕುತೋ ಜನ್ಮ ಕುತೋ ಕರ್ಮ ಕುತೋಽಹಂಕಾರ ಏವ ಚ .. ೧೫-೧೩..

ಏಕನಾದ, ಅವ್ಯಯನಾದ, ಶಾಂತನಾದ, ನಿಷ್ಕಳಂಕನಾದ, ಚಿತ್ ಸ್ವರೂಪನಾದ ನಿನಗೆ ಜನ್ಮ ಎಲ್ಲಿಯದು, ಕರ್ಮ  ಎಲ್ಲಿಯದು, ಅಹಂಕಾರ ಎಲ್ಲಿಯದು?

 ಯತ್ತ್ವಂ ಪಶ್ಯಸಿ ತತ್ರೈಕಸ್ತ್ವಮೇವ ಪ್ರತಿಭಾಸಸೇ .
ಕಿಂ ಪೃಥಕ್ ಭಾಸತೇ ಸ್ವರ್ಣಾತ್ ಕಟಕಾಂಗದನೂಪುರಂ .. ೧೫-೧೪..

ನೀನು ಎಲ್ಲಿ ನೋಡಿದಲ್ಲಿ ಅಲ್ಲಿ ನೀನು ಕಾಣುವದು ನಿನ್ನದೇ ರೂಪಗಳನ್ನು. ಚಿನ್ನದ ಬಳೆ, ಗೆಜ್ಜೆ, ವಂಕಿಗಳು ಚಿನ್ನಕ್ಕಿಂತ ಭಿನ್ನವಾಗಿ ಎಂದಾದರೂ ಕಾಣುವದೇ? 

ತಾತ್ಪರ್ಯವೆಂದರೆ ಕೇವಲ ಆತ್ಮ ಮಾತ್ರ ಸತ್ಯ. ಈ ಜಗತ್ತು ಆತ್ಮಕ್ಕಿಂತ ಬೇರೆಯಲ್ಲ. ನೀನು ನೋಡುವ ಪ್ರತಿಯೊಂದು ವ್ಯಕ್ತಿ ಅಥವಾ ಪ್ರಾಣಿ ಆತ್ಮವೇ ಆಗಿದೆ.

 ಅಯಂ ಸೋಽಹಮಯಂ ನಾಹಂ ವಿಭಾಗಮಿತಿ ಸಂತ್ಯಜ .
ಸರ್ವಮಾತ್ಮೇತಿ ನಿಶ್ಚಿತ್ಯ ನಿಃಸಂಕಲ್ಪಃ ಸುಖೀ ಭವ .. ೧೫-೧೫..

ಇದು ನಾನು, ಇದು ನಾನಲ್ಲ ಎಂಬ ಭೇದವನ್ನು ಸಂಪೂರ್ಣ ತ್ಯಜಿಸು. ಸರ್ವವೂ ಆತ್ಮವೆಂದು ನಿಶ್ಚಿತ ಮಾಡಿಕೊಂಡು, ನಿರ್ಮೋಹಿಯಾಗಿ ಸುಖಿಯಾಗು.

ತವೈವಾಜ್ಞಾನತೋ ವಿಶ್ವಂ ತ್ವಮೇಕಃ ಪರಮಾರ್ಥತಃ .
ತ್ವತ್ತೋಽನ್ಯೋ ನಾಸ್ತಿ ಸಂಸಾರೀ ನಾಸಂಸಾರೀ ಚ ಕಶ್ಚನ .. ೧೫-೧೬..  

ನಿನ್ನ ಅಜ್ಞಾನದಿಂದ ಮಾತ್ರ ಈ ವಿಶ್ವ (ಇರುವಂತೆ ತೋರುತ್ತದೆ). ವಾಸ್ತವಿಕವಾಗಿ ನೋಡಿದರೆ ನಿನ್ನ ಹೊರತು ಬೇರೆ ಯಾರೂ ಸಂಸಾರದಲ್ಲಿಯೂ ಇಲ್ಲ, ಅಥವಾ ಅದರಾಚೆಯೂ ಇಲ್ಲ. 

 ಭ್ರಾಂತಿಮಾತ್ರಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಯೀ .
ನಿರ್ವಾಸನಃ ಸ್ಫೂರ್ತಿಮಾತ್ರೋ ನ ಕಿಂಚಿದಿವ ಶಾಮ್ಯತಿ .. ೧೫-೧೭.. 

ಈ ವಿಶ್ವ ಕೇವಲ ಮಾಯೆಯೇ ಹೊರತು ಇನ್ನೇನೂ ಅಲ್ಲ ಎಂದು ತಿಳಿದವನು, ವಾಸನೆರಹಿತನಾಗಿ, ಕೇವಲ ಚಿತ್ ಸ್ವರೂಪನಾಗಿ ಏನೂ ಇಲ್ಲವೆಂದು ಶಾಂತನಾಗುತ್ತಾನೆ.

ಏಕ ಏವ ಭವಾಂಭೋಧಾವಾಸೀದಸ್ತಿ ಭವಿಷ್ಯತಿ .
ನ ತೇ ಬಂಧೋಽಸ್ತಿ ಮೋಕ್ಷೋ ವಾ ಕೃತಕೃತ್ಯಃ ಸುಖಂ ಚರ .. ೧೫-೧೮..

 ಈ ಭವಸಾಗರದಲ್ಲಿ ನೀನು (ಆತ್ಮ) ಏಕೈಕನು ಆಗಿದ್ದೆ, ಒಬ್ಬನೇ ಇದ್ದೀಯಾ, ಮುಂದೆಯೂ ಒಬ್ಬನೇ ಇರುವೆ. ನಿನಗೆ ಬಂಧನವೂ ಇಲ್ಲ. ಮೋಕ್ಷವೂ ಇಲ್ಲ. (ಹಾಗಾಗಿ) ಸಂತೃಪ್ತನಾಗು, ಸುಖಿಯಾಗು. (ನಿನ್ನಲ್ಲೇ ವಿಶ್ವ ಅಡಗಿದೆ. ಹಾಗಾಗಿ ನೀನು ಅನಾದಿ ಕಾಲದಿಂದ ಇರುವೆ. ಮುಂದೆಯೂ ಇರುತ್ತೀಯಾ. ಸಚ್ಚದಾನಂದ ಸ್ವರೂಪ ಆತ್ಮನಾದ ನಿನಗೆ ಬಂಧನ ಎಲ್ಲಿಯದು? ಮೋಕ್ಷ ಎಲ್ಲಿಯದು?)

ಮಾ ಸಂಕಲ್ಪವಿಕಲ್ಪಾಭ್ಯಾಂ ಚಿತ್ತಂ ಕ್ಷೋಭಯ ಚಿನ್ಮಯ .
ಉಪಶಾಮ್ಯ ಸುಖಂ ತಿಷ್ಠ ಸ್ವಾತ್ಮನ್ಯಾನಂದವಿಗ್ರಹೇ .. ೧೫-೧೯..

ಸಂಕಲ್ಪ, ವಿಕಲ್ಪಗಳಿದ ನಿನ್ನ ಚಿತ್ತವನ್ನು ಕ್ಷೋಭೆಗೊಳಿಸಬೇಡ. ಶಾಂತನಾಗಿ, ಆನಂದಸ್ವರೂಪನಾಗಿ ನಿನ್ನಲ್ಲಿ ನೀನು ಸುಖದಿಂದಿರು.

ತ್ಯಜೈವ ಧ್ಯಾನಂ ಸರ್ವತ್ರ ಮಾ ಕಿಂಚಿದ್ ಹೃದಿ ಧಾರಯ .
ಆತ್ಮಾ ತ್ವಂ ಮುಕ್ತ ಏವಾಸಿ ಕಿಂ ವಿಮೃಶ್ಯ ಕರಿಷ್ಯಸಿ .. ೧೫-೨೦.. 

ಧ್ಯಾನವನ್ನೂ ಎಲ್ಲ ರೀತಿಯಲ್ಲಿ ತ್ಯಜಿಸು. ಮನದಲ್ಲಿ ಯಾವ ಭಾವವನ್ನೂ ಇಟ್ಟುಕೊಳ್ಳಬೇಡ. ನೀನೇ ಆತ್ಮ, ನೀನು ಬಂಧಮುಕ್ತ. ಯೋಚಿಸಿ ಏನು ತಾನೆ ಸಾಧಿಸುತ್ತೀಯಾ? (ಆತ್ಮಜ್ಞಾನವಾಗಿಲ್ಲದವರು ಭಗವಂತನ ಧ್ಯಾನ ಮಾಡುತ್ತಾರೆ. ನೀನೇ ಆತ್ಮನಾಗಿರುವಾಗ - ನಿನ್ನ ಮತ್ತು ಪರಮಾತ್ಮನಲ್ಲಿ ಭೇದವೇ ಇಲ್ಲದಿರುವಾಗ ಧ್ಯಾನವೆಲ್ಲಾ ಬೇಕಾಗಿಲ್ಲ.)


ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....