ಅಷ್ಟಾವಕ್ರಗೀತಾ - ೪
ಆತ್ಮಸಾಕ್ಷಾತ್ಕಾರದ ವೈಭವ
ಜನಕ ಉವಾಚ ..
ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ .
ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1..
ಓಹ್, ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ)
ಈ ಅಧ್ಯಾಯದಲ್ಲಿ ಜನಕನು ಅಷ್ಟಾವಕ್ರನ ಮಾತಿಗೆ ಉತ್ತರಿಸುತ್ತಿದ್ದಾನೆ
ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ .
ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2..
ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ ದೀನರಾಗಿ ಹಾತೊರೆಯುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ.
ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ದೇವತೆಗಳು ಸಹ ಹಾತೊರೆಯುತ್ತಾರೆ ಹಾಗೂ ಅದು ದೊರೆಯದೇ ಅಸಂತುಷ್ಟರಾಗುತ್ತಾರೆ.
ತಜ್ಜ್ಞಸ್ಯ ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ .
ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3..
ಹೊಗೆಯು ಆಕಾಶವನ್ನು ಸ್ಪರ್ಶ್ರಿಸುತ್ತಿರುವಂತೆ ಕಂಡರೂ ಅದು ಆಕಾಶದಿಂದ ದೂರವೇ ಇರುವಂತೆ, ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ.
ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ .
ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷಮೇತ ಕಃ .. 4-4..
ಈ ಜಗತ್ತೆಲ್ಲವನ್ನು ಸ್ವಯಂ ಆತ್ಮವೇ ಎಂದು ತಿಳಿದ ಮಹಾತ್ಮನನ್ನು, ತನ್ನಿಚ್ಛೆಯಂತೆ ಜೀವಿಸುವದನ್ನು ಯಾರು ತಾನೇ ತಡೆಯಬಲ್ಲರು.
ಜಪ-ತಪ-ಸಾಧನೆ ನಿಯಮಗಳೆಲ್ಲ ಇವೆಲ್ಲ ಆತ್ಮಜ್ಞಾನಿಗೆ ಅನ್ವಯಿಸುವದಿಲ್ಲ. ಯಾಕೆಂದರೆ ಅವನು ಇವೆಲ್ಲದರಿಂದ ಅತೀತನು.
ಆಬ್ರಹ್ಮಸ್ತಂಬಪರ್ಯಂತೇ ಭೂತಗ್ರಾಮೇ ಚತುರ್ವಿಧೇ .
ವಿಜ್ಞಸ್ಯೈವ ಹಿ ಸಾಮರ್ಥ್ಯಮಿಚ್ಛಾನಿಚ್ಛಾವಿವರ್ಜನೇ .. 4-5..
ಬ್ರಹ್ಮನಿಂದ ಒಳಗೊಂಡು ಹುಲ್ಲುಕಡ್ಡಿಯವರೆಗಿನ ಚತುರ್ವಿಧದ ಜೀವಿಗಳಲ್ಲಿ, ಯಾರಿಗಾದರೂ ಇಚ್ಛೆ ಅನಿಚ್ಛೆಗಳನ್ನು ಮೀರುವ ಸಾಮರ್ಥ್ಯವಿದ್ದರೆ ಅದು ಆತ್ಮಜ್ಞಾನಿಗೆ ಮಾತ್ರ.
ಚತುರ್ವಿಧದ ಜೀವಿಗಳು - ಅಂಡಜ (ಮೊಟ್ಟೆಯಿಂದ ಹುಟ್ಟಿದವರು - ಪಕ್ಷಿಗಳು, ಹಲ್ಲಿ ಇತ್ಯಾದಿ), ಪಿಂಡಜ(ತಾಯಿಯ ಹೊಟ್ಟೆಯಿಂದ ಹುಟ್ಟಿದವರು - ಸಸ್ತನಿಗಳು, ಮನುಷ್ಯರು), ಸ್ವೇದಜ (ಬೆವರಿನಿಂದ ಹುಟ್ಟಿದವರು - ಹೇನು, ಬ್ಯಾಕ್ಟೀರಿಯಾ ಇತ್ಯಾದಿಗಳು), ಉದ್ಭಿಜ (ಭೂಮಿಯಿಂದ ಹುಟ್ಟಿದವರು - ಸಸ್ಯಗಳು)
ಆತ್ಮಾನಮದ್ವಯಂ ಕಶ್ಚಿಜ್ಜಾನಾತಿ ಜಗದೀಶ್ವರಂ .
ಯದ್ ವೇತ್ತಿ ತತ್ಸ ಕುರುತೇ ನ ಭಯಂ ತಸ್ಯ ಕುತ್ರಚಿತ್ .. 4-6..
ತಾನು ಅದ್ವೈತನು, ತಾನು ಜಗದೀಶ್ವರನಿಂದ ಬೇರೆಯಲ್ಲ ಎಂದು ಅರಿತವರು ಬಹಳ ವಿರಳ. ಹಾಗೆ ತಿಳಿದವನು ತನಗೆ ತಿಳಿದಂತೆ ವರ್ತಿಸುತ್ತಾನೆ ಮತ್ತು ಅವನಿಗೆ ಯಾವ ಭಯವೂ ಇರುವದಿಲ್ಲ.
ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.
Comments
Post a Comment